ರಾಜಾಂಗಣದಲ್ಲಿ ಕಿಶೋರ ಯಕ್ಷ ಸಂಭ್ರಮಕ್ಕೆ ಚಾಲನೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಡಿಸೆ೦ಬರ್ 1 , 2013
|
ಡಿಸೆ೦ಬರ್ 1, 2013
|
ರಾಜಾಂಗಣದಲ್ಲಿ ಕಿಶೋರ ಯಕ್ಷ ಸಂಭ್ರಮಕ್ಕೆ ಚಾಲನೆ
ಉಡುಪಿ :
ಶಾಲೆಗಳಲ್ಲಿ ಯಕ್ಷ ಶಿಕ್ಷಣವನ್ನು ನೀಡುವುದರಿಂದ ಮಕ್ಕಳಲ್ಲಿ ಪುರಾಣ ಪುರುಷರ ಪರಿಚಯದ ಜತೆಗೆ ಭಾರತೀಯ ಸಂಸ್ಕೃತಿ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ. ಈ ಮೂಲಕ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಲು ಸಾಧ್ಯವಿದೆ ಎಂದು ಪರ್ಯಾಯ ಸೋದೆಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು. ಅವರು ಭಾನುವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀಕೃಷ್ಣ ಮಠ, ಯಕ್ಷ ಶಿಕ್ಷಣ ಟ್ರಸ್ಟ್ ಹಾಗೂ ಯಕ್ಷಗಾನ ಕಲಾರಂಗದ ಆಶ್ರಯದಲ್ಲಿ ಆಯೋಜಿಸಲಾಗಿರುವ ಕಿಶೋರ ಯಕ್ಷ ಸಂಭ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಶಾಸಕ ಪ್ರಮೋದ್ ಮಧ್ವರಾಜ್ ಮಾತನಾಡಿ, ಬೇರೆ ಬೇರೆ ಕ್ಷೇತ್ರಗಳಲ್ಲಿ ತಜ್ಞರ ಕೊರತೆ ಕಂಡು ಬಂದಂತೆ ಯಕ್ಷಗಾನದಲ್ಲೂ ಕಲಾವಿದರ ಕೊರತೆ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಶಿಕ್ಷಣದ ಜತೆಯಲ್ಲಿ ಯಕ್ಷಗಾನವನ್ನು ಕಲಿಸುವುದರಿಂದ ಈ ಕೊರತೆಯನ್ನು ನೀಗಿಸಬಹುದು ಎಂದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ ಕಿಶೋರ ಯಕ್ಷಗಾನದಿಂದ ಮಹಾಭಾರತ, ರಾಮಾಯಣ ಮುಂತಾದ ಪುರಾಣ ಕಥೆಗಳನ್ನು ಮಕ್ಕಳು ಕಲಿಯುವುದರ ಜತೆಯಲ್ಲಿ , ಅವರ ದೈಹಿಕ, ಮಾನಸಿಕ ಬೆಳವಣಿಗೆಯೂ ಉತ್ತಮಗೊಂಡು ಉತ್ತಮ ಶೈಕ್ಷಣಿಕ ಅಭಿವೃದ್ಧಿಯನ್ನು ಪಡೆಯುವಂತಾಗಿದೆ ಎಂದರು.
ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಮಾಹಿತಿ ನೀಡಿ, ಪ್ರಸ್ತುತ ಜಿಲ್ಲೆಯ 41 ಪ್ರೌಢ ಶಾಲೆಗಳಲ್ಲಿ 1,000ಕ್ಕೂ ಅಧಿಕ ವಿದ್ಯಾರ್ಥಿಗಳು ವಾರಕ್ಕೆ ಒಂದೆರೆಡು ಗಂಟೆ ಯಕ್ಷಗಾನವನ್ನು ಅಭ್ಯಾಸಿಸುತ್ತಿದ್ದಾರೆ. ಧರ್ಮಾತೀತವಾಗಿ ಈ ಮಣ್ಣಿನ ಕಲೆಯನ್ನು ಕಲಿತು ಉಳಿಸಿ ಬೆಳೆಸಲು ಮುಂದಾಗಿದ್ದಾರೆ. ಈ ಮಹಾತ್ಕಾರ್ಯಕ್ಕಾಗಿ 21 ಯಕ್ಷಗಾನ ಗುರುಗಳನ್ನು ನಿಯೋಜಿಸಲಾಗಿದೆ. ಕಳೆದ ವರ್ಷ ಈ ಅಭಿಯಾನಕ್ಕೆ 12ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿದೆ. ಪರ್ಯಾಯ ಸೋದೆ ಮಠಾೀಶರು ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ ಎಂದರು.
ಡಿ.1ರಿಂದ 18ರವರೆಗೆ ಪ್ರತಿದಿನ ಸಂಜೆ 4ರಿಂದ 8 ಗಂಟೆಯವರೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಕಿಶೋರ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಡಿ.23ರಿಂದ 29ರವರೆಗೆ ಬ್ರಹ್ಮಾವರದಲ್ಲಿ ಕಿಶೋರ ಯಕ್ಷ ಸಂಭ್ರಮ ನಡೆಯಲಿದೆ.
ಅಂಬಲಪಾಡಿ ದೇವಾಲಯದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ರವಿಶಂಕರ ರಾವ್, ಯಕ್ಷ ಶಿಕ್ಷಣಟ್ರಸ್ಟ್ನ ಟ್ರಸ್ಟಿಗಳಾದ ಎಂ.ಗಂಗಾಧರ ರಾವ್, ನಾರಾಯಣ ಎಂ.ಹೆಗಡೆ, ಇಂದ್ರಾಳಿಯ ಯಕ್ಷಗಾನ ಕೇಂದ್ರದ ನಿರ್ದೇಶಕ ಎಚ್.ಕೃಷ್ಣ ಭಟ್ ಉಪಸ್ಥಿತರಿದ್ದರು. ಯಕ್ಷ ಶಿಕ್ಷಣ ಟ್ರಸ್ಟ್ನ ಎಸ್.ವಿ.ಭಟ್ ಸ್ವಾಗತಿಸಿದರು.
ಕೃಪೆ :
http://vijaykarnataka.indiatimes.com/
|
|
|